ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಣ್ಣ ಕಥೆ (ಹವ್ಯಕ ಭಾಷೆ): ನಂಬಿದ ದೇವರು

ಸಣ್ಣ ಕಥೆ (ಹವ್ಯಕ ಭಾಷೆ): ನಂಬಿದ ದೇವರು



"ಈ ಸರ್ತಿಯಾದರೂ ಕೆಲಸ ಸಿಕ್ಕಿದರೆ ಸಾಕಿತ್ತು. ಸಮಯಕ್ಕೆ ಮೊದಲೇ ಎತ್ತಿಗೊಳ್ಳೆಕ್ಕು ಸಂದರ್ಶನಕ್ಕೆ" ಹೇಳಿ ಗ್ರೇಶಿಗೊಂಡು ಪ್ರಶಾಂತ ಅಮ್ಮ ಕೊಟ್ಟ ಕಾಫಿ ಕುಡುದು ದೋಸೆ ತಿಂದು ಬೈಕ್ ಹತ್ತಿ ಹೆರಟ.


ಎಂಜಿನಿಯರಿಂಗ್ ಮುಗುಷಿ ಕೆಲಸ ಹುಡುಕಿಗೊಂಡಿಪ್ಪ ಮಾಣಿ ಪ್ರಶಾಂತ. ಒಂದು ಅಂಗಡಿ ಮಡಿಕ್ಕೊಂಡಿಪ್ಪ ಅಪ್ಪ ಅಮ್ಮ ಇಷ್ಟೇ ಸಣ್ಣ ಕುಟುಂಬ. ಕಷ್ಟ ಪಟ್ಟು ಮಗನ ಕಲಿಷಿ ಒಳ್ಳೆ ಉದ್ಯೋಗಕ್ಕೆ ಸೇರೆಕ್ಕು ಹೇಳಿ ಅಪ್ಪನ ಕನಸು.


ಕೆಲಸಕ್ಕೆ ಅರ್ಜಿಹಾಕಿ ಸಂದರ್ಶನ ಎದುರಿಸಿ ಸಾಕಾತು ಅವಂಗೆ. ಎಲ್ಲಿ ಹೋದರೂ ಕೇಳುದು "ನಿಂಗೊಗೆ ಎಷ್ಟು ಅನುಭವ ಇದ್ದು ಕೆಲಸಮಾಡಿ". ಕೆಲಸ ಕೊಟ್ಟರಲ್ಲದ ಅನುಭವ ಅಪ್ಪದು. ಒಳ್ಳೆ ಪ್ರಶ್ನೆ ಇವರದ್ದು ಹೇಳಿ ಗ್ರೇಶಿಗೊಂಡು ಕೈ ಮುಗುದಿಕ್ಕಿ ಬಪ್ಪದೇ ಆತು.


ಈ ಸರ್ತಿ ಸಂದರ್ಶನಕ್ಕೆ ಕರೆ ಬಂದ‌ ಕಂಪೆನಿ ಎಲೆಕ್ಟ್ರಾನಿಕ್ಂಗೆ ಸಂಬಂಧ ಪಟ್ಟದು. ಒಳ್ಳೆ ಕಂಪೆನಿಯಡ. ಒಳ್ಳೆ ಸಂಬಳವೂ ಕೊಡ್ತವಡ. ಗೆಳೆಯ ಕೊಟ್ಟ ಸಲಹೆಯ ಕೇಳಿ ಅರ್ಜಿ ಹಾಕಿ ಕರೆಯೂ ಬಂತು. "ನಂಬಿದ ದೇವರಿಂಗೆ ಹರಕೆ ಹೊತ್ತು ಹೊತ್ತು ಕೆಲಸ ಸಿಕ್ಕಿಯಪ್ಪಗ ಸಿಕ್ಕುವ ಸಂಬಳ ಹರಕೆಯ ತೀರುಸುಲೇ ಬೇಕಕ್ಕು." 


ಅವನದ್ದೇ ಯೋಚನೆಲಿ ಬೈಕ್ ಬಿಟ್ಟುಗೊಂಡು ಹೋಗಿಗೊಂಡಿದ್ದ ಪ್ರಶಾಂತಂಗೆ ಮಂಗಳೂರಿನ ದಾರಿ ಹೊಸತ್ತೆಂತು ಅಲ್ಲ. ಅರ್ಧ ದಾರಿಗೆ ಎತ್ತಿಯಪ್ಪಗ ಎಲ್ಲಾ ವಾಹನಂಗೊ ನಿಂದು ಟ್ರಾಫಿಕ್ ಜಾಮ್ ಆಗಿಗೊಂಡಿತ್ತು. "ಇನ್ನೆಂತ ಮಾಡುದು. ಇನ್ನು ಸಮಯಕ್ಕೆ ಎತ್ತುತ್ತೋ ಇಲ್ಲೆಯೋ" ಹೇಳಿ ಗ್ರೇಶಿಗೂಂಡು ನಿಂದಪ್ಪಗ ಎಲ್ಲರೂ ಅವರವರ ವಾಹನಂದ ಇಳುದು ಎಂತಾಯಿದು ನೋಡುವಾ ಹೇಳಿ ಹೋಪದು ಕಂಡತ್ತು. ಪ್ರಶಾಂತನೂ ಬೈಕ್ ಕರೆಲಿ ಮಡುಗಿ ನಡಕ್ಕೊಂಡು ಮುಂದೆ ಹೋದಪ್ಪಗ ಸುಮಾರು ಅರುವತ್ತು ವರ್ಷದ ವೃದ್ಧ ಮಾರ್ಗಲ್ಲಿ ಪ್ರಜ್ಞೆ ಇಲ್ಲದ್ದೆ ಬಿದ್ದಿದವು. ಕಾಂಬಗ ವಾಕಿಂಗ್ ಹೆರಟವರಾಂಗೆ ಕಾಣ್ತು. ಎಲ್ಲೊರೂ ನಿಂದು ನೋಡುವವಲ್ಲದ್ದೆ ಆರೊಬ್ಬನೂ ಏಳುಸುದು ಕಾಣ್ತಿಲ್ಲೆ.


ಕೂಡ್ಲೆ ಪ್ರಶಾಂತ ಅವರ ಹತ್ತರೆ ಹೋಗಿ ಅವು ಉಸಿರಾಟ ಮಾಡ್ತಾ ಇದ್ದವು ಹೇಳಿ ಖಚಿತ ಪಡಿಸಿಗೊಂಡು ನಿಂದು ನೋಡುವವರತ್ರ "ನೀರು ಕೊಡಿ" ಕೇಳಿದ. ಅಲ್ಲಿದ್ದವರಲ್ಲಿ ಆರೋ ಒಂದು ಬಾಟಲಿ ನೀರು ಕೊಟ್ಟವು. ನೀರು ಚುಮುಕಿಸಿಯಪ್ಪಗ ಮೆಲ್ಲಂಗೆ ಕಣ್ಣು ಬಿಟ್ಟು ನೋಡಿದವು. ಮೆಲ್ಲಂಗೆ ಅವರ ಏಳ್ಸಿ ಹೆಗಲಿಂಗೆ ಒರಗಿಸಿ ನೀರು ಕುಡಿಸಿಯಪ್ಪಗ ಅವಕ್ಕೆ ರೆಜಾ ಜೀವ ಬಂದಾಂಗಾತು.


ಎನ್ನ ಮನೆ ಇಲ್ಲೇ ಹತ್ರ ಒಂದರಿ ಮನೆಗೆ ಬಿಟ್ಟಿಕ್ಕು. ಹೇಳಿಯಪ್ಪಗ ಪ್ರಶಾಂತಂಗೆ ಅವನ ಸಂದರ್ಶನದ ನೆಂಪಾತು. ಇವರ "ಮುಟ್ಟಿದ್ದೇ ತಪ್ಪಾತಾ" ಹೇಳಿ ಗ್ರೇಶಿಗೊಂಡರೂ "ಹೋಗಲಿ ಇದಲ್ಲದ್ರೆ ಮತ್ತೊಂದು. ಕೆಲಸ ಸಿಕ್ಕುಗು ಹೇಳಿ ನಿಘಂಟು ಎಂತದೂ ಇಲ್ಲೆ." ಸಮಾಧಾನ ಮಾಡಿಗೊಂಡು "ನಿಂಗೊ ಇಲ್ಲೇ ನಿಲ್ಲಿ. ಆನು ಬೈಕ್ ತತ್ತೆ. ಕೂಪಲೆ ಎಡಿಗಲ್ಲದ" ಹೇಳಿ ಅವರ ಕರೆಲಿ ಕೂರ್ಸಿದ. ವಾಹನಂಗೊ ಎಲ್ಲಾ ಹೋದಪ್ಪಗ ಅವರ ಬೈಕ್ ಲಿ ಕೂರ್ಸಿಗೊಂಡು ಅವು ಹೇಳಿದ ದಾರಿಲಿ ಮೆಲ್ಲಂಗೆ ಬೈಕ್ ಬಿಟ್ಟುಗೊಂಡು ಕರಕ್ಕೊಂಡು ಹೋದ.


ಅವನ ಹಿಂದೆ ಕೂದವು "ಎನ್ನ ಹೆಸರು ಶ್ರೀರಾಮ ಭಟ್ಟ ಹೇಳಿ. ಮಂಗಳೂರಿಲಿ ಶ್ರೀರಾಮ್ ಗ್ರೂಪ್ ಆಫ್ ಕಂಪೆನಿ ಹೇಳಿ ಕಂಪೆನಿ ಇದ್ದು. ಎನಗೆ ಶುಗರ್ ಇದ್ದು. ಹಾಂಗೆ ಉದಿಯಪ್ಪಗ ವಾಕಿಂಗ್ ಹೋಯೆಕ್ಕು ಹೇಳಿ ಡಾಕ್ಟರ್ ಹೇಳಿದ್ದವು. ಹಾಂಗೆ ಇಂದು ವಾಕಿಂಗ್ ಹೋಗಿ ಬಪ್ಪಗ ಸಡನ್ನಾಗಿ ಶುಗರ್ ಕಮ್ಮಿ ಆತು ಕಾಣ್ತು. ಹಾಂಗೆ ತಲೆ ತಿರುಗಿ ಬಿದ್ದದು. ನೀನು ಎಂತ ಕೆಲಸಕ್ಕೆ ಹೆರಟದೋ ಎಂತದೋ. ಎನ್ನಂದಾಗಿ ನಿನಗೆ ತೊಂದರೆ ಆತು." ಹೇಳಿಯಪ್ಪಗ "ಆನು ಸಂದರ್ಶನಕ್ಕೆ ಹೆರಟದು. ಇನ್ನು ಹೋಗಿ ಪ್ರಯೋಜನ ಇಲ್ಲೆ. ತೊಂದರಿಲ್ಲೆ. ಇನ್ನೊಂದು ನೋಡಿರಾತು. ನಿಂಗೊಗೆ ಎಂತಾಯಿದಿಲ್ಲೆನ್ನೆ ಅಷ್ಟು ಸಾಕು" ಹೇಳಿಯಪ್ಪಗ ಅವರ ಮನೆ ಎತ್ತಿತ್ತು."


ಶ್ರೀರಾಮ ಭಟ್ಟರಿಂಗೆ ಒಂದೇ ಮಗಳು. ಅದುವೇ ಈಗ ಅವರ ಕಂಪೆನಿಯ ನಡೆಸಿಗೊಂಡು ಹೋಪದು. ಇವು ಬರೀ ಮೇಲ್ವಿಚಾರಣೆ ಮಾತ್ರ ನೋಡಿಗೊಂಬದು. ಆಫೀಸಿಂಗೆ ಹೆರಟುಗೊಂಡಿದ್ದ ಮಗಳು ಶಾಂಭವಿ ಅಪ್ಪನ ಕಂಡು ಗಾಬರಿಯಾಗಿ "ಎಂತಾತು ಅಪ್ಪ" ಹೇಳಿಗೊಂಡು ಹೆರ ಬಂತು. ನಡದ್ದದರೆಲ್ಲಾ ವಿವರವಾಗಿ ಹೇಳಿ "ಈ ಮಾಣಿಂದಾಗಿ ಆನಿಂದು ಬದ್ಕಿ ಬಂದದು. ಎನ್ನಂದಾಗಿ ಇವಂಗೆ ತೊಂದರೆ ಆತು" ಹೇಳಿಯಪ್ಪಗ ಅವರ ಮಗಳು ಶಾಂಭವಿ ಇವಂಗೆ ಕೃತಜ್ಞತೆ ಸಲ್ಲಿಸಿದ. ಅವರ ಹೆಂಡತಿ ತಿಂಡಿ ಕಾಫಿ ಎಲ್ಲಾ ಕೊಟ್ಟು ಚಂದಕ್ಕೆ ಮಾತಾಡ್ಸಿದವು. ಇವನ ಮನೆಯ ವಿವರ ಎಲ್ಲಾ ತಿಳ್ಕೊಂಡವು ಗೆಂಡ ಹೆಂಡತಿ.


ನಿನ್ನ ಮನೆಗೆ ಎಂಗೊ ಬತ್ತೆಯ ಹೇಳಿ ಅವನ ಕೈಂದ ಅಡ್ರೆಸ್ ಫೋನ್ ನಂಬರ್ ಎಲ್ಲಾ ತೆಕ್ಕೊಂಡವು. ಸರಿ ಆನಿನ್ನು ಬತ್ತೆ ಹೇಳಿ ತಿರುಗಿ ಮನೆಗೆ ಬಂದ.


ಪ್ರಶಾಂತ ಬಪ್ಪಗಳೇ ಅವನ ಮೋರೆ ನೋಡಿದ ಅಮ್ಮಂಗೆ ಈ ಸರ್ತಿಯೂ ಕೆಲಸ ಮೋಸವೇ ಹೇಳಿ ಅರ್ಥಾತು. "ಎಂತ ಮಗ ಇಷ್ಟು ಬೇಗ ಬಂದದು" ಹೇಳಿಯಪ್ಪಗ ನಡೆದ ಕಥೆಯ ಹೇಳಿದ. ಆನು ಅವರ "ಮುಟ್ಟಿದ್ದೇ ತಪ್ಪಾತಾ" ಹೇಳಿ ಆವುತ್ತಮ್ಮ ಹೇಳಿಯಪ್ಪಗ "ಕಷ್ಟ ಕಾಲಲ್ಲಿ ಸಹಾಯ ಮಾಡಿದರೆ ನವಗೆ ಇನ್ನೊಬ್ಬ ಸಹಾಯ ಮಾಡುಗು" ಹೇಳಿ ಅಮ್ಮ ಸಮಾಧಾನ ಮಾಡಿದವು.


ಮತ್ತೆ ಮರುದಿನಂದ ಪ್ರಶಾಂತಂಗೆ ಕೆಲಸ ಹುಡ್ಕುವ ಕೆಲಸ ಶುರು. ಪೇಪರ್ಲಿ ಬಪ್ಪ" ಕೆಲಸ ಖಾಲಿ ಇದೆ" ಕಾಲಮ್ ನೋಡ್ತಾ ಇಪ್ಪಗ ಮನೆಯೆದುರು ಒಂದು ಕಾರು ಬಂದು ನಿಂದ ಶಬ್ಧ ಕೇಳಿತ್ತು.'ಆರಪ್ಪ ಬಂದದು' ಹೇಳಿ ಗ್ರೇಶಿಗೊಂಡು ಹೆರ ಬಂದಪ್ಪಗ ನಿನ್ನೆ ಪರಿಚಯ ಆದ ಶ್ರೀರಾಮ ಭಟ್ಟರುದೆ ಅವರ ಹೆಂಡತಿಯೂ ಕಾರಿಂದ ಇಳಿವದು ಕಂಡತ್ತು. ಬನ್ನಿ ಬನ್ನಿ ಹೇಳಿ ದಿನಿಗೇಳಿ  ಅಮ್ಮ ಅಪ್ಪಂಗೆ ಅವರ ಪರಿಚಯ ಮಾಡಿಕೊಟ್ಟ. ಅಸರಿಂಗೆ ಮಾಡಿಕೊಟ್ಟು ಉಪಚಾರ ಮಾಡಿ ಅಮ್ಮ"ಬಡವರ ಮನೆ ಸುಧಾರಿಸಿಗೊಳ್ಳಿ" ಹೇಳಿ ಸಂಕೋಚಪಟ್ಟುಗೊಂಡವು.


"ನಿಂಗಳ ಉಪಚಾರ ಬೇಕಾದಷ್ಟು ಆತು. ತಪ್ಪು ತಿಳಿಯೆಡಿ. ಎಂಗೊಗೆ ನಿಂಗಳ ಮಗನ ಗುಣ ತುಂಬಾ ಇಷ್ಟ ಆತು‌. ಹಾಂಗಾಗಿ ಎಂಗಳ ಒಂದೇ ಮಗಳು ಶಾಂಭವಿಯ ಪ್ರಶಾಂತಂಗೆ ಮದುವೆ ಮಾಡಿ ಕೊಟ್ಟು ಕಂಪೆನಿಯನ್ನು ಅವಂಗೆ ಕೊಡೆಕ್ಕು ಹೇಳಿ ಆಶೆ.ನಿಂಗೊ ಒಪ್ಪುತ್ತರೆ ಮಾತ್ರ. ಮದುವೆ ಇಷ್ಟ ಇಲ್ಲೆ ಹೇಳಿಯಾದರೆ ಎಂಗಳ ಕಂಪೆನಿಲಿಯೇ ಅವಂಗೆ ಕೆಲಸ ಕೊಡುವಾ ಹೇಳಿ ತೀರ್ಮಾನ ಮಾಡಿದ್ದೆಯ. ಒತ್ತಾಯ ಅಲ್ಲ. ನಿಂಗಳ ಅಭಿಪ್ರಾಯಕ್ಕೆ ಯೆಂಗೊ ಬೆಲೆ ಕೊಡ್ತೆಯ" ಹೇಳಿ ಶ್ರೀರಾಮ. ಭಟ್ರು ಪ್ರಶಾಂತನ ಅಪ್ಪನ ಕೈ ಹಿಡಿದು ಕೇಳಿಗೊಂಡವು.


ಅನಿರೀಕ್ಷಿತವಾಗಿ‌ ಬಂದ ಅವಕಾಶ ಮೂರು ಜನಕ್ಕೂ ಎಂತ ಹೇಳೆಕ್ಕು ಅರಡಿಯಾದ್ದಾಂಗೆ ಆತು. "ನಿಂಗಳೇ ಅವಕಾಶ ಕೊಡ್ತಾ ಇಪ್ಪಗ ಬೇಡ ಹೇಳ್ಲೆ ಎಂಗೊ ಆರು.ಶುಭಸ್ಯ ಶೀಘ್ರಮ್" ಹೇಳಿಯಪ್ಪಗ ಎಲ್ಲೋರ  ಮೋರೆಲಿ ಸಂತೋಷದ ನೆಗೆ ಮೂಡಿತ್ತು. ಪ್ರಶಾಂತಂಗೆ "ನಂಬಿದ ದೇವರು ಯಾವಾಗಲೂ ಕೈಬಿಡ" ಅಮ್ಮ ಹೇಳುವ ಮಾತು ನೆಂಪಾತು.


-ಗಾಯತ್ರಿ ಪಳ್ಳತ್ತಡ್ಕ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post