ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಟುಂಬ ರಾಜಕಾರಣದ ಬೇರು ಜಾತಿ ರಾಜಕಾರಣದೊಳಗೆ ಅಡಗಿಕೊಂಡಿದೆ

ಕುಟುಂಬ ರಾಜಕಾರಣದ ಬೇರು ಜಾತಿ ರಾಜಕಾರಣದೊಳಗೆ ಅಡಗಿಕೊಂಡಿದೆ


ರಾಷ್ಟ್ರ ರಾಜ್ಯ ಪ್ರಾದೇಶಿಕ ಮಟ್ಟದಲ್ಲಿ ವಂಶ ರಾಜಕಾರಣ ಹುಟ್ಟಿ ಬೆಳೆಯಲು ಕಾರಣ ಏನು ಅನ್ನುವುದರ ಮೇಲೆ ತುಸು ಗಮನ ಹರಿಸಿದಾಗ ಅದರ ವಾಸ್ತವಿಕತೆಯ ಚಿತ್ರಣ ಗೇೂಚರಿಸುತ್ತಾ ಹೇೂಗುತ್ತದೆ. ಈ ನಿಟ್ಟಿನಲ್ಲಿ ಸ್ಥೂಲವಾಗಿ ದೃಷ್ಟಿ ಹರಿಸಿದಾಗ ನಾನು ಕಂಡುಕೊಂಡ ವಿಷಯಗಳನ್ನು ತಮ್ಮಮುಂದೆ ಎಳೆಎಳೆಯಾಗಿ ಪ್ರಸ್ತುತ ಪಡಿಸಲು ಬಯಸುತ್ತೇನೆ. ಇದರ ಸತ್ಯಾ ಸತ್ಯತೆಯ ಬಗ್ಗೆ ನೀವು ಕೂಡ ಬೆಳಕು ಚೆಲ್ಲಬಹುದು. ಇದು ಪಕ್ಷ ಮೀರಿದ ರಾಜಕೀಯ ಅಧ್ಯಯನವಾಗ ಬೇಕು ಅನ್ನುವುದು ನನ್ನ ಉದ್ದೇಶ ಕೂಡಾ.


ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬಳಸುವ ಒಂದು ಸಾಮಾನ್ಯ  ಮಾತೆಂದರೆ "ಕುಟುಂಬ ರಾಜಕೀಯ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ". ಇದು ಕೊನೆಗೊಳ್ಳಬೇಕು ಅನ್ನುವ ವಾದ. ಈ ವಂಶ ಅಥವಾ ಕುಟುಂಬ ರಾಜಕಾರಣ ವ್ಯವಸ್ಥೆಗೆ ಬರೇ ರಾಜಕೀಯ ಪಕ್ಷಗಳು ಕಾರಣ ಅನ್ನುವುದು ಸರಿಯಲ್ಲ. ಬದಲಾಗಿ ಕುಟುಂಬ ರಾಜಕೀಯ ಬೆಳವಣಿಗೆಗೆ ಪೂರಕವಾದ ಅಂಶಗಳು ನಮ್ಮ ಸಮಾಜದಲ್ಲಿಯೇ ನಾವೇ ಸೃಷ್ಟಿ ಮಾಡಿಕೊಂಡ ಜಾತಿ ವ್ಯವಸ್ಥೆಯ ಸಬಲೀಕರಣ ಮತ್ತು ಅತಿಯಾದ ವ್ಯಾಮೋಹವೂ ಕೂಡ ಕುಟುಂಬ ರಾಜಕಾರಣವನ್ನು ನೀರೆರೆದು ಪೇೂಷಿಸುತ್ತಿದೆ ಅನ್ನುವುದು ಅಷ್ಟೇ ಸತ್ಯ. ಇದಕ್ಕೆ ಪೂರಕವಾದ ದೃಷ್ಟಾಂತಗಳನ್ನು ತಮ್ಮ ಮುಂದೆ ಇಟ್ಟು ಪುಷ್ಟಿಕರಿಸುತ್ತೇನೆ.


ದೇಶದ ಅತೀ ದೊಡ್ಡ ರಾಜ್ಯವೆನ್ನಿಸಿಕೊಂಡ ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ಮುನ್ನೆಲೆಗೆ ಬಂದಾಗ ಮುಲಾಯಂ ಸಿಂಗ್‌ ಯಾದವ ತಮ್ಮ  ಜಾತಿಯ ರಾಜಕೀಯ ಪ್ರಬಲ ಶಕ್ತಿಯನ್ನೇಬಳಸಿಕೊಂಡು ತಮ್ಮ ಕುಟುಂಬದ ರಾಜಕಾರಣವನ್ನೇ ಹುಟ್ಟಿಸಿಕೊಂಡರು. ಅದೇ ಬಿಹಾರಕ್ಕೆ ಬಂದಾಗ ಕೂಡಾ ಲಲ್ಲುಾ ಕೂಡಾ ಜಾತಿ ಅಸ್ತ್ರವನ್ನೆ ಬಳಸಿಕೊಂಡು ವಂಶ ರಾಜಕಾರಣವನ್ನೆ ಮುಂದುವರಿಸಿದರು. ಅದೇ ಆಂದ್ರ ದಲ್ಲಿ  ಕೂಡಾ ರೆಡ್ಡಿ ರಾಜಕಾರಣ ಕೂಡಾ ಬೇರೂರಲು. ಇದೇ ಜಾತಿ ಅನ್ನುವ ವಾತ್ಸಲ್ಯದ ಬೀಜಗಳೇ ಮೂಲಮಂತ್ರ.

ಬಹು ದೂರವೇಕೆ ನಮ್ಮ ರಾಜ್ಯ ದಲ್ಲಿ ಕೂಡಾ ದೇವೇಗೌಡರ ಕುಟುಂಬ ಕೂಡಾ ಜಾತಿ ಪ್ರಾಬಲ್ಯವೇ ಅವರ ಕುಟುಂಬ ರಾಜಕಾರಣದ ಮೂಲ ಶಕ್ತಿ .ಅದೇ ಬಿಜೆಪಿಯಲ್ಲೂ ಕೂಡಾ ಯಡಿಯೂರಪ್ಪನವರ ಕುಟುಂಬ ರಾಜಕೀಯ ಶಕ್ತಿಗೆ ಅವರ ಪ್ರಬಲ ಜಾತಿಯ ಪ್ರೀತಿ ವಿಶ್ವಾಸಗಳೇ ಅವರಿಗೆ ಶ್ರೀರಕ್ಷೆ. ಅದೇ ಕಾಂಗ್ರೆಸ್ ನಲ್ಲೂ ಕೂಡಾ ಇದೇ ಕತೆ. ಖಗೆ೯, ಸಿದ್ಧರಾಮಯ್ಯ ಮುಂತಾದ ಕೆಲವೇ ನಾಯಕರು ತಮ್ಮ ಕುಟುಂಬ ರಾಜಕಾರಣವನ್ನಮುಂದುವರಿಸಲು ಪ್ರೇರಣಾ ಶಕ್ತಿ ಅಂದರೆ ಅವರ ಜಾತಿಯ ಒಲವು ಬೆಂಬಲ. ಆದರೆ ಇಂತಹ ಜಾತಿ ಪ್ರಾಬಲ್ಯವಿಲ್ಲದವರು ನಿರಾಶಾ ಭಾವದಲ್ಲಿ ಸುಮ್ಮನಿದ್ದಾರೆ ಅಷ್ಟೇ. ಹಾಗಾಗಿ ಈ ಜಾತಿಯ ಕೃಪಕಟಾಕ್ಷದಿಂದ ರಾಜಕೀಯ ಅಧಿಕಾರ ಸಂಪಾದಿಸಿಕೊಂಡವರು ತಮ್ಮ ಕುಟುಂಬದಿಂದ ಬೇರೆಯವರಿಗೆ ಅಂದರೆ ತಮ್ಮ ಜಾತಿಯ ಇನ್ನೊಂದು ಕುಟುಂಬಕ್ಕೆ ಅಧಿಕಾರ ಹಂಚಿ ಹೇೂಗಲು ಬಯಸುವುದಿಲ್ಲ. ಬದಲಾಗಿ ಅದನ್ನು ತಮ್ಮ ಕುಟುಂಬದ ಮಗನೊ, ಮಗಳೊ, ಹೆಂಡ್ತಿ ಸೊಸೆ ಅಳಿಯನ ಸ್ಥಿರ ಆಸ್ಥಿಯಾಗಿ ಉಳಿಯಲು ಬಯಸುತ್ತಾರೆ. ಎಲ್ಲಿಯ ತನಕ ಅಂದರೆ ಸಾಯುವಾಗ ಕೂಡಾ ವಿಲ್ ಬರೆದು ಸಾಯುತ್ತಾರೆ ವಿನಃ ಅನ್ಯಥಾ ಬೇರೆಯವರ ಪಾಲಾಗಲು ಬಿಡೋಲ್ಲ. ಅಂದರೆ ಈ ಅಧಿಕಾರ ತಾವು ಕಷ್ಟ ಪಟ್ಟು ಗಳಿಸಿದ ತಮ್ಮ ಮನೆಯ ಸ್ವಂತ ಆಸ್ತಿ ಅನ್ನುವ ಮನಃಸ್ಥಿತಿ ಅವರದ್ದು.


ಅದೇ ನಮ್ಮ ಕರಾವಳಿ ಜಿಲ್ಲೆಗೆ ಬನ್ನಿ, ಈ ಕುಟುಂಬ ರಾಜಕೀಯದ ಬೇಳೆ ಬೇಯುವುದೇ ಇಲ್ಲ. ಇಲ್ಲಿ ಇಂತಹ ಒಂದು ಉದಾಹರಣೆ ಕೊಡಿ ನೇೂಡೇೂಣ. ಮಲ್ಪೆ ಮಧ್ವರಾಜ ಕುಟುಂಬ ರಾಜಕೀಯವಾಗಿ ಇಲ್ಲಿ ಬೆಳೆದದ್ದು ಜಾತಿ ರಾಜಕೀಯದಿಂದ ಅಲ್ಲ ಅನ್ನುವುದು ನೂರಕ್ಕೆ ನೂರು ಸತ್ಯ. ಬದಲಾಗಿ ಅವರವರ ಸ್ವ ಶಕ್ತಿ ಸಾಮರ್ಥ್ಯದಿಂದ ಅನ್ನುವುದು ಅಷ್ಟೇ ಸತ್ಯ .ಅಂದರೆ ನಮ್ಮ ಕರಾವಳಿ ಜಿಲ್ಲೆ ಜಾತಿ ರಾಜಕಾರಣದಿಂದ ಸದಾ ದೂರ. ಹಾಗಾಗಿ ಇಡಿ ರಾಜ್ಯಕ್ಕೆ ಜಾತಿ ಮೀರಿದ ರಾಜಕೀಯ ಶಕ್ತಿ ಹುಟ್ಟು ಹಾಕುವಲ್ಲಿ ಕರಾವಳಿ ಜಿಲ್ಲೆಗಳು ಮಾದರಿ ಅನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯ.


ತೀಮಾ೯ನ: ಒಟ್ಟಿನಲ್ಲಿ ಕುಟುಂಬ ರಾಜಕಾರಣಕ್ಕೆ ಜಾತಿಯ ಮೇಲಿನ ಅತಿಯಾದ ಆಸ್ಮಿತೆಯ ಪ್ರೀತಿ ನಂಬುಗೆಯೇ ಮೂಲ. ಅದಕ್ಕಾಗಿಯೇ ಹುಟ್ಟಿ ಕೊಂಡಿರಬೇಕು "ನೀರಿಗಿಂತ ರಕ್ತ ದಪ್ಪ" (blood is thicker than water) ಅನ್ನುವ ನಾಣ್ನುಡಿ. ಇದುವೇ ನನ್ನ ರಾಜಕೀಯ ವಿಶ್ಲೇಷಣೆಯ ತೀರ್ಮಾನ ಕೂಡ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم