ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂತಾರಾಷ್ಟ್ರೀಯ ಮಟ್ಟದ ಮುಕ್ತಕ ರಚನಾ ಸ್ಪರ್ಧೆಯ ಸಮಾರೋಪ

ಅಂತಾರಾಷ್ಟ್ರೀಯ ಮಟ್ಟದ ಮುಕ್ತಕ ರಚನಾ ಸ್ಪರ್ಧೆಯ ಸಮಾರೋಪ



ಮಂಗಳೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾದ ಡಾ ಸುರೇಶ ನೆಗಳಗುಳಿ ಇವರ ಸಾರಥ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮುಕ್ತಕ ರಚನಾ ಸ್ಪರ್ಧೆಯ ಸಮಾರೋಪ ಸಮಾರಂಭವು ಕೋವಿಡ್ ನಿಮಿತ್ತ ಜಾಲತಾಣ ಮುಖಾಂತರ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಸಾಹಿತಿ ವಕೀಲೆ ಪರಿಮಳ ಮಹೇಶ್ ರವರ ಸ್ವಾಗತ ಭಾಷಣದಿಂದ ಆರಂಭವಾಗಿ, ಕೇಂದ್ರ ಸಾಹಿತ್ಯ ವೇದಿಕೆಯ ವತಿಯಿಂದ ವಿವಿಧ ಪ್ರಕಾರದ ಸ್ಪರ್ಧೆಗಳನ್ನು ನಡೆಸುತ್ತಾ ವಿಜೇತರಿಗೆ ನಗದು ಬಹುಮಾನ ಸಹಿತವಾಗಿ ಇಪ್ಪತ್ತ ಮೂರು ಮಂದಿಯನ್ನು ಗುರುತಿಸುತ್ತಾ  ಬರಹಗಾರರಿಗೆ ಪ್ರೋತ್ಸಾಹ ಕೊಡುವ ವೈಖರಿಯು ಈಗ ಎಂಭತ್ತೆಂಟನೆಯ ಕಾರ್ಯಕ್ರಮವಾಗಿದ್ದು ಇನ್ನೂ ತರಹೇವಾರಿ ಪ್ರಕಾರಗಳನ್ನು ಪರಿಚಯಿಸುವ ಇರಾದೆಯಿದೆ ಮತ್ತು ಮುಂದೆ ಒಂದು ಸಮ್ಮೇಳನ ನಡೆಸುವ ಮಹದಾಸೆಯಿದೆ ಎಂದು ಡಾ ಸುರೇಶ ನೆಗಳಗುಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.


ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ‌ ಮಹಾ ಪ್ರಬಂಧಕರಾದ ಬೈಕಾಡಿ ನಾಗರಾಜ ರಾವ್ ಮಾತನಾಡುತ್ತಾ ದಕ್ಷಿಣ ಕನ್ನಡವು ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಉಲ್ಲೇಖಿಸುತ್ತಾ ಪ್ರಥಮ ಜ್ಞಾನಪೀಠ ಪಡೆದ ಕವಿಗಳ ಜಿಲ್ಲೆಯಾದ ದಕ್ಷಿಣ ಕನ್ನಡದ ಹಲವಾರು ಮಹಾನ್ ಕವಿಗಳನ್ನು ನೆನಪಿಸಿದರು. ಗೌರವಾಧ್ಯಕ್ಷರಾದ ಮಂಗಳೂರಿನ ಲೆಕ್ಕ ಪತ್ರ ಪರಿಶೋಧಕ ಹಾಗೂ ಸಾಹಿತಿ ಎಸ್ ಎಸ್ ನಾಯಕರು ಮುಕ್ತಕ ವಿಶೇಷತೆಯನ್ನು ವಿಶ್ಲೇಷಿಸುತ್ತಾ ಇಲ್ಲಿ ಭಾಗವಹಿಸಿದ ಸರ್ವ ಕವಿಗಳ ಮುಕ್ತಕದ ಪುಸ್ತಕವೊಂದನ್ನು ಪ್ರಕಟಿಸುವ ಆಶಯ ವ್ಯಕ್ತ ಪಡಿಸಿದರು.


ಭಾಗವಹಿಸಿದ ಕವಿಗಳ ಪೈಕಿ ಕೋ.ಮ ಮುತ್ತಣ್ಣ ಗೋಪಾಲಕೃಷ್ಣ ಶಾಸ್ತ್ರಿ, ಕೆ‌ಟಿ ಶ್ರೀಮತಿ, ಮಲ್ಲೇಶ್ ಜಿ ಯವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.


ಸ್ಥಾಪಕಾಧ್ಯಕ್ಷ ಕೊಟ್ರೇಶ ಉಪ್ಪಾರ್ ರವರು ವೇದಿಕೆ ನಡೆದು ಬಂದ ಹಾದಿ ಹಾಗೂ ಸಾಧನೆಗಳ ಅನಾವರಣ ಗೈದರು. ರಾಜ್ಯ ಸಂಚಾಲಕ ವಾಸು ಸಮುದ್ರವಳ್ಳಿಯವರು ಮುಕ್ತಕದಂತಹ ವಿರಳ ಹಾಗೂ ಗಹನ ಸಾಹಿತ್ಯ ಪ್ರಕಾರವನ್ನು ಪರಿಚಯಿಸಿದ ಮಂಗಳೂರು ಬಳಗವನ್ನು ಶ್ಲಾಘಿಸಿದರು.


ರಾಜ್ಯಾಧ್ಯಕ್ಷೆ ಶಾಲಿನಿ ರುದ್ರಮುನಿಯವರು ಸಮಯೋಚಿತವಾಗಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿನೋಟವನ್ನು ಬೀರುವ ಸಾಕ್ಷ್ಯ ಚಿತ್ರ, ಭೂತ ಕೋಲ ಕಂಗೀಲು ನೃತ್ಯ ಮುಂತಾದ ಸಾಂಸ್ಕೃತಿಕ ಚಿತ್ರಣಗಳನ್ನೂ ಮಧ್ಯೆ ಮಧ್ಯೆ ಪ್ರದರ್ಶಿಸಲಾಯಿತು.

ಈ ಸ್ಪರ್ಧೆಯ ತೀರ್ಪು ಗಾರರಾಗಿ ಸಹಕರಿಸಿದ ಖ್ಯಾತ ಸಾಹಿತಿ, ಷಟ್ಪದಿ, ಮುಕ್ತಕ ಕವಿ ವಿ.ಬಿ ಕುಳಮರ್ವ ಅವರು ಮುಕ್ತಕ ರಚನೆ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಗಡಿನಾಡ ಕನ್ನಡತಿ ಡಾ ವಾಣಿಶ್ರೀ ಕಾಸರಗೋಡು‌ ಮತ್ತು ಗುರುರಾಜ್ ಎಂ ಆರ್ ರವರ ಸುಮಧುರ ಪ್ರಾರ್ಥನೆ, ಶ್ಯಾಮ ಸುಂದರ ಶಿಡ್ಲ ಘಟ್ಡ ಇವರಿಂದ ಡಾ ಸುರೇಶ ನೆಗಳಗುಳಿ ರಚಿತ ಮುಕ್ತಕ ಮಾಲೆಯ ಗಾಯನ ಹಾಗೂ ಕುಮಾರಿ ಪ್ರಣಮ್ಯ ರವರ ಭಕ್ತಿಗೀತೆ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದುವು.

ಕಾರ್ಯದರ್ಶಿ ಚಂದನಾ ಕಾರ್ತಟ್ಟುರವರು ಸಮಾರಂಭದ ಅಚ್ಚುಕಟ್ಟಾದ ನಿರ್ವಹಣೆಯನ್ನು ಮಾಡಿದ್ದರು

ಮಂಗಳೂರಿನ ಸೌಮ್ಯಾ ಗೋಪಾಲ್, ಕೊಡಗಿನ‌ ಜಯಲಕ್ಷ್ಮಿ ಎಂಬಿ ಮತ್ತು ಲಕ್ಷ್ಮಿ ವಿ ಭಟ್ ಮಂಜೇಶ್ವರ ಇವರು ಕ್ರಮವಾಗಿ 500, 400, 300 ರೂಗಳ ಮೂರು ಸ್ಥಾನಗಳನ್ನು ಪಡೆದರು.


ಬೋರೇ ಗೌಡ ಅರಸೀಕೆರೆ, ಶಾಂತಾ ಪುತ್ತೂರು, ಸುಲೋಚನ‌ ಜೆ ಹಾಸನ, ಲತಾ ಜೈ ಶಂಕರ್ ಮಡಿಕೇರಿ, ಪ್ರಭಾವತಿ ಬಿ ಶೆಡ್ತಿ ಕಾವಡಿ, ಗೋಪಾಲಕೃಷ್ಣ ಶಾಸ್ತ್ರಿ ಮಂಗಳೂರು, ನಾಗರತ್ನಾ ಜೆ ಹೊಳೆ ಸಿರಿಗೆರೆ, ಶರಾವತಿ ಪಟಗಾರ ಭಟ್ಕಳ, ಗೋಪಾಲಕೃಷ್ಣ ಭಟ್ ಮನವಳಿಕೆ ಮತ್ತು ಹಾಲೇಶ್ ಕೆ ಜಿ ಚಳ್ಳಕೆರೆ ಇವರು ಅತ್ಯತ್ತಮ ಹತ್ತು ಸ್ಥಾನಗಳನ್ನು ಪಡೆದರು.


ಕೊಳಚಪ್ಪೆ ಗೋವಿಂದ ಭಟ್, ರವಿಕಾಂತ ಹೆಗ್ಡೆ ಮೂಡುಬಿದಿರೆ, ಹಿತೇಶ್ ಕುಮಾರ್ ಕಾಸರಗೋಡು, ಆಶಾ ಬಾಲೇಶ ಬೆಳಗಾವಿ, ಕೊ.ಮ ಮುತ್ತಣ್ಣ ಶಿಕಾರಿಪುರ, ಸುಮನ್ ರಾವ್ ಮಂಡ್ಯ, ಡಾ ವಾಣಿಶ್ರೀ ಕಾಸರಗೋಡು, ವಿಮಲಾ ಭಾಗವತ್ ಸಿರ್ಸಿ, ಬಿ ಸತ್ಯವತಿ ಭಟ್ ಕೊಳಚಪ್ಪು, ಮತ್ತು ಕೃಷ್ಣ ದತ್ರಾತ್ರೇಯ ಪದಕಿಯವರು ಕ್ರಮವಾಗಿ ಹತ್ತು ಮೆಚ್ಚುಗೆಯ ಸ್ಥಾನ ಪಡೆದರು.


ಚಂದನಾ ಕಾರ್ತಟ್ಟು ರವರಿಂದ ಧನ್ಯವಾದ ಸಮರ್ಪಣೆ ಯಾದ ಬಳಿಕ ಡಾ ಸುರೇಶ್ ನೆಗಳಗುಳಿ ರಚಿತ ಪರಿಷತ್ ಗೀತೆಯನ್ನು ಕರ್ಣಾಟಕ ಬ್ಯಾಂಕ್ ಅಧಿಕಾರಿ ಸುಹಾಸ್ ನೆಗಳಗುಳಿ ಯವರ ಸುಶ್ರಾವ್ಯ ವಾದ ಕರೋಕೆ ಹಾಡಿನೊಂದಿಗೆ ಸಮಾರಂಭ ಸಮಾಪ್ತವಾಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post