ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಪರಿಸರದಲ್ಲಿ ಗೋವಿಗಾಗಿ ಮೇವು– ವಿದ್ಯಾರ್ಥಿಗಳ ಸೇವೆ

ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಪರಿಸರದಲ್ಲಿ ಗೋವಿಗಾಗಿ ಮೇವು– ವಿದ್ಯಾರ್ಥಿಗಳ ಸೇವೆ


ಕುಂಬಳೆ: "ಗೋವು ಮತ್ತು ಮೇವಿನ ಮಧ್ಯೆ ನಾವು ಸೇತುವೆಯಾಗೋಣ. ಗೋವು- ಮೇವು- ನಾವು ಎಂಬ ಸಂಕೋಲೆ ಚಂದ. ಗೋವು- ನೋವು- ಹಸಿವು- ಸಾವು ಎಂಬ ಸಂಕೋಲೆ ಬೇಡ. ಈ ಸಂಕೋಲೆಯನ್ನು ತುಂಡು ಮಾಡೋಣ. ಗೋವು- ಮೇವು- ನಾವು ಎಂಬ ಅಮೃತದ ಸಂಕೋಲೆಯನ್ನು ನಿರ್ಮಾಣ ಮಾಡೋಣ. ಗೋವು ಮತ್ತು ಮೇವಿನ ಮಧ್ಯೆ ನಾವು ಕೊಂಡಿಯಾಗೋಣ. ತನ್ಮೂಲಕ ಸೃಷ್ಟಿಗೇ ಸಂತರ್ಪಣೆ ಮಾಡಿ ಸೃಷ್ಟೀಶ್ವರನನ್ನು ಪ್ರಸನ್ನಗೊಳಿಸುವಂತೆ ಮಾಡೋಣ" ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ನುಡಿದರು.


ಶ್ರೀಗಳವರ ಮಾರ್ಗದರ್ಶನದಲ್ಲಿ ಕಾರ್ಯವೆಸಗುವ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ  ವಿದ್ಯಾರ್ಥಿ ವಾಹಿನಿ  ನೇತೃತ್ವದಲ್ಲಿ ಜರಗಿದ ಬಜಕೂಡ್ಲಿನ ಅಮೃತಧಾರಾ ಗೋಶಾಲೆಗಾಗಿ ಮತ್ತು ಉಪ್ಪಳ ಸಮೀಪದ ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದ ಗೋಶಾಲೆಗೆ ಮುಳಿಹುಲ್ಲನ್ನು ಸಂಗ್ರಹಿಸಿ ಸಾಗಿಸುವ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಶ್ರೀಗಳವರು ತಮ್ಮ ಸಂದೇಶದಲ್ಲಿ ನುಡಿದರು.


ಕುಂಬಳೆಗೆ ಸಮೀಪದ ಅತ್ಯಂತ ಪುರಾತನವಾದ ಐತಿಹ್ಯವಿರುವ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನಕ್ಕೆ ಸೇರಿದ ವಿಶಾಲವಾದ ಅಡ್ಕದಲ್ಲಿ 2022 ಜನವರಿ 9 ರಂದು ಆದಿತ್ಯವಾರ ಗೋವಿಗಾಗಿ ಮೇವು, ಸೇವಾಅರ್ಘ್ಯವು ಯಶಸ್ವಿಯಾಗಿ ಜರಗಿತು. ಮೂರು ಲೋಡು ಹುಲ್ಲನ್ನು ಕತ್ತರಿಸಿ ಲಾರಿಗಳಿಗೆ ತುಂಬಿಸಿ ಗೋಶಾಲೆಗಳಿಗೆ ಸಾಗಿಸಲಾಯಿತು. 


ಬೆಳಗ್ಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಮುಂದೆ ಪ್ರಾರ್ಥನೆ ಮತ್ತು ಶ್ರೀ ಗುರುವಂದನೆಯೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳೇ ಶ್ರೀಗೋಧ್ವಜವನ್ನು ಆರೋಹಣ ಮಾಡಿದರು. ನೂರಕ್ಕೂ ಮಿಕ್ಕಿದ ಪುಟಾಣಿಗಳಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವರೆಗೆ ಅತ್ಯಂತ ಉತ್ಸಾಹದಿಂದ ಮಕ್ಕಳು ಮುಳಿಹುಲ್ಲು ಸಂಗ್ರಹದಲ್ಲಿ ತೊಡಗಿದರು. 


ಹವ್ಯಕ ಸಮಾಜದ ಮಹನೀಯರು, ಮಹಿಳೆಯರು, ಊರ ಗೋಪ್ರೇಮಿಗಳು ಎಲ್ಲರೂ ಸೇರಿ ಅತ್ಯಂತ ಶ್ರದ್ಧಾಭಕ್ತಿಯಿಂದ ಗೋವಿಗಾಗಿ ಮೇವು ಸಂಗ್ರಹಿಸುವಲ್ಲಿ ಕಾರ್ಯಪ್ರವೃತ್ತರಾದರು.


ಕುಂಬಳೆ ಪ್ರದೇಶದಲ್ಲಿ ನಡೆಯುವ ಹೆಚ್ಚಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನವಸೇವಾವೃಂದ ಮತ್ತು ನವಸೇವಾ ಮಹಿಳಾ ಸಂಘ ಅಂಬಿಲಡ್ಕ ಇದರ ಸದಸ್ಯರು ತಮ್ಮ ರಜಾದಿನವನ್ನು ಈರೀತಿಯಲ್ಲಿ ಗೋಸೇವೆಯ ಮೂಲಕ ಸದುಪಯೋಗ ಮಾಡಿಕೊಂಡರು. 


ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷರಾದ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹವ್ಯಕ ಮಹಾಮಂಡಲ ಮಾತೃತ್ವಂ ವಿಭಾಗಾಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು, ಹವ್ಯಕ ಮಹಾಸಭಾ ಬೆಂಗಳೂರು ಇದರ ಕಾಸರಗೋಡು ಜಿಲ್ಲಾ ಪ್ರತಿನಿಧಿ ಶ್ರೀ ವೈಕೆ ಗೋವಿಂದ ಭಟ್, ಡಾ ಮಾಲತಿ ಪ್ರಕಾಶ, ಮಹಾಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಮುಳ್ಳೇರಿಯ ಹವ್ಯಕ ಮಂಡಲ ಉಪಾಧ್ಯಕ್ಷರಾದ ಶ್ರೀಮತಿ ಕುಸುಮ ಪೆರ್ಮುಖ, ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನೀ ವಿಭಾಗ ಪ್ರಧಾನರಾದ ಶ್ರೀ ಶ್ಯಾಮ ಪ್ರಸಾದ ಕುಳಮರ್ವ, ಮುಳ್ಳೇರಿಯ ಮಂಡಲ ಮಾತೃವಿಭಾಗ ಪ್ರಧಾನರಾದ ಶ್ರೀಮತಿ ಗೀತಾಲಕ್ಮೀ ಮುಳ್ಳೇರಿಯಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು.


ಅಮೃತಧಾರಾ ಗೋಶಾಲೆಯ ಅಧ್ಯಕ್ಷರಾದ  ಜಗದೀಶ ಬಿ ಜಿ ಮತ್ತು ತಂಡದವರು ಸಹಕರಿಸಿದರು.  

ಮಾಹಾಮಂಡಲದ ಮಹೇಶ ಎಳ್ಳಿಯಡ್ಕ, ಶ್ಯಾಮ ಪ್ರಸಾದ ಸರಳಿ, ವಿವಿಧ ವಲಯ ಪದಾಧಿಕಾರಿಗಳು, ಗೋಬಂಧುಗಳು ಉಪಸ್ಥಿತರಿದ್ದರು.  


ಸಾಮಾಜಿಕ ಮುಂದಾಳು, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರೂ ಆದ ಶ್ರೀ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಅವರು ಸೇವಾ ಅರ್ಘ್ಯದ ಸಂದರ್ಭ ಭೇಟಿನೀಡಿ ಕಾರ್ಯಕರ್ತರನ್ನು ಅಭಿನಂದಿಸಿದರು. 


ಗುಂಪೆ ವಲಯದ ಅಧ್ಯಕ್ಷರಾದ ಶ್ರೀ ಶಂಭು ಹೆಬ್ಬಾರ್ ಸ್ವಾಗತಿಸಿ ಗುಂಪೆ ವಲಯದ ಕಾರ್ಯದರ್ಶಿ ಶ್ರೀ ಕೇಶವಪ್ರಸಾದ ಎಡಕ್ಕಾನ ವಂದಿಸಿದರು. 


ಬಿಸಿಲಿನ ಝಳವನ್ನು ಲೆಕ್ಕಿಸಿದೆ ಮುಳಿಹುಲ್ಲು ಸಂಗ್ರಹಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ಸೇವಾ ಅರ್ಘ್ಯ ನಡೆಸಿಕೊಟ್ಟ ಎಲ್ಲರನ್ನೂ ಸಾಮಾಜಿಕ ಮುಂದಾಳುಗಳು ಅಭಿನಂದಿಸಿದರು.  


ಮಕ್ಕಳ ಉತ್ಸಾಹ ಈ ಕಾರ್ಯಕ್ರಮಕ್ಕೆ ಹಲವೆಡೆಗಳಿಂದ ಕೊಡುಗೆಗಳು ಒಂದಷ್ಟು ಹರಿದು ಬಂದುವು. ಅನನ್ಯಾ ಫೀಡ್ಸ್ ಹುಬ್ಬಳ್ಳಿ ಸಂಸ್ಥೆಯವರು ಬಿಸಿಲು ತಡೆಯುವ ಟೋಪಿಗಳನ್ನು ಕೊಡುಗೆಯಾಗಿ ಕೊಟ್ಟರು. ಹವ್ಯಕ ಮಹಾಸಭಾ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಸ್ಮರಣಿಕೆಯಾಗಿ ಪುಸ್ತಕಗಳನ್ನು ವಿತರಿಸಿದರು. ಪುಸ್ತಕ ವಿತರಣೆಯ ಉದ್ಘಾಟನೆಯನ್ನು ಗೋವಿಗಾಗಿ ಮೇವು ಕಾರ್ಯಕ್ರಮದ ರೂವಾರಿ  ಕಾಮದುಘಾ ಟ್ರಸ್ಟ್ ಅಧ್ಯಕ್ಷರಾದ ಡಾ. ವೈ.ವಿ. ಕೃಷ್ಣಮೂರ್ತಿ ಇವರು ನಿರ್ವಹಿಸಿದರು. 


ಗ್ರಾಮೀಣ ಅಡುಗೆಯ ಸೊಗಡನ್ನು ಪ್ರಪಂಚಕ್ಕೆ ಪರಿಚಯಿಸುವುದರ ಮೂಲಕ ಪ್ರಖ್ಯಾತರಾದ, ಯೂಟ್ಯೂಬಿನಲ್ಲಿ ಐದು ಲಕ್ಷಕ್ಕೂ ಮಿಕ್ಕು ಸದಸ್ಯರನ್ನು ಗಳಿಸಿದ ಭಟ್ ಆಂಡ್ ಭಟ್ ಚಾನಲ್ ನ ಶ್ರೀ ಸುದರ್ಶನ ಮತ್ತು ಶ್ರೀ ಮನೋಹರ ಬೆದ್ರಡಿ ಅವರು ಸ್ವತಃ ವಿಶಿಷ್ಟವಾಗಿ ಲಘು ಉಪಾಹಾರವನ್ನು ಸಿದ್ಧಗೊಳಿಸಿ ವಿತರಿಸಿದರು. ಚಲಿಸುವ ಗೋಆಲಯ ಪ್ರಖ್ಯಾತಿಯ ಶ್ರೀ ಗಣೇಶ ಭಟ್ಟ ಮುಣ್ಚಿಕ್ಕಾನ ತಮ್ಮ ಮನೆಯಲ್ಲೇ ತಯಾರಿಸಿದ ಮಂಡಕ್ಕಿಯಿಂದ ಚರುಮುರಿ ತಯಾರಿಸಿ ಮಕ್ಕಳಿಗೆ ವಿತರಿಸಿದರು. ಮಹಿಳಾ ವಿಭಾಗದವರಿಂದ ಸಮೃದ್ಧವಾದ ಇಡ್ಲಿ ರಸಾಯನದ ಕೊಡುಗೆಯಾಯಿತು.

ಇಂತಹ ವಿಶಿಷ್ಟ ಕಾರ್ಯಕ್ರಮದ ಪೂರ್ಣ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸಲಾಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


1 Comments

Post a Comment

Post a Comment

Previous Post Next Post