ಮಂಗಳೂರು: ಮಂಗಳೂರಿನಲ್ಲಿ ವೃತ್ತಿಯಲ್ಲಿರುವ ಉಡುಪಿ ಮೂಲದ ದಂಪತಿಗಳು ವಾರಾಂತ್ಯದಲ್ಲಿ ತಮ್ಮ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದಾಗ, ಸುರತ್ಕಲ್ ಮುಕ್ಕದಲ್ಲಿ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ಅನಧಿಕೃತ ಟೋಲ್ ಗೇಟ್ ನಲ್ಲಿ ಸಿಬ್ಬಂದಿಯೋರ್ವ ತೀರಾ ಅನುಚಿತ ವರ್ತನೆ ತೋರಿದ ಪ್ರಕರಣ ದಿನಾಂಕ 27.11.2021ರಂದು ನಡೆದಿದೆ. ಈ ವೇಳೆ ಸಹಾಯಕ್ಕಾಗಿ ದಂಪತಿಗಳು ಸುರತ್ಕಲ್ ಠಾಣೆಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ 'ಘಟನಾ ಸ್ಥಳಕ್ಕೆ ಕಳುಹಿಸಲು ತಮ್ಮಲ್ಲಿ ವಾಹನವಿಲ್ಲ' ವೆಂದು ಠಾಣೆಯಿಂದ ಸಬೂಬು ಕೇಳಿಬಂದಿದ್ದು, ಹೈವೇ ಗಸ್ತು ವಾಹನವನ್ನೂ ಕಳುಹಿಸದೆ ಕೈಚೆಲ್ಲಿದಾಗ, ದಾರಿ ಕಾಣದೆ ದಂಪತಿಗಳು ತೀವ್ರವಾಗಿ ನೊಂದು ಕೊನೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನೇರ ಕರೆ ಮಾಡಿದ್ದಾರೆ.
ಆಗ ಕೂಡಲೇ ಕಾರ್ಯಪ್ರವೃತ್ತರಾದ ಪೋಲೀಸ್ ಕಮಿಷನರ್ ಶಶಿಕುಮಾರ್ ಅವರು ದುರುಳ ಆರೋಪಿಯನ್ನು ಬಂಧಿಸಲು ಅದೇ ಸುರತ್ಕಲ್ ಠಾಣೆಯ ಇನ್ಸ್ಪೆಕ್ಟರ್ ಸಹಿತವಾಗಿ ಸಿಬ್ಬಂದಿಗಳನ್ನು ಹತ್ತು ನಿಮಿಷದಲ್ಲಿ ಕಳುಹಿಸಿದ್ದಾರೆ.
ದುರ್ವರ್ತನೆ ತೋರಿದ್ದ ಟೋಲ್ ಸಿಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇದೀಗ ಆರೋಪಿಯು ಜಾಮೀನು ರಹಿತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಸೂಕ್ತ ಸಮಯದಲ್ಲಿ ಕಮಿಷನರ್ ಅವರಂತಹ ಮೇಲಧಿಕಾರಿಗಳೇ ಈ ತರದ ಪುಂಡಾಟಿಕೆಯನ್ನು ನಿಭಾಯಿಸುವ ಪರಿಸ್ಥಿತಿ ಬಂದಿದೆ! ನಿಜವಾಗಿಯೂ ಕಮಿಷನರ್ ಅವರು ಈ ವಿಷಯದಲ್ಲಿ ಅಭಿನಂದನಾರ್ಹರು. ಇನ್ನಾದರೂ ಕಮಿಷನರ್ ಶಶಿಕುಮಾರ್ ಮಾದರಿಯಂತೆ ಪೊಲೀಸರು ಜನಸ್ನೇಹಿಯಾಗಿ ವರ್ತಿಸಿಯಾರೇ?
ಜಿಲ್ಲೆಯ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕೃಪಾಪೋಷಿತವಾಗಿ ನಡೆಯುತ್ತಿರುವ ಅನಧಿಕೃತ/ಕಾನೂನುಬಾಹಿರ ಟೋಲ್ ಗೇಟ್ ಇದಾಗಿದ್ದು, ಹಲವು ನಾಗರಿಕರು ಇಲ್ಲಿ ತೀವ್ರ ಕಿರಿಕಿರಿ, ತೊಂದರೆ, ಮುಜುಗರ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق