ಪುತ್ತೂರು: ಕರ್ತವ್ಯದಿಂದ ವಿಮುಖರಾಗಬಾರದು ಇದು ಧರ್ಮ. ಕರ್ತವ್ಯ ಪ್ರಜ್ಞೆ ಬಿಟ್ಟು ಉಳಿದ ಸಂದರ್ಭದಲ್ಲಿ ಯಾರನ್ನೂ ದ್ವೇಷಿಸಬಾರದು. ಎಲ್ಲರನ್ನೂ ಪ್ರೀತಿಸಬೇಕು. ಗೆಳೆತನ, ಮಿತ್ರಭಾವದಿಂದ ಎಲ್ಲರನ್ನೂ ಕಾಣಬೇಕು. ಕರುಣೆ ನಮ್ಮ ಹೃದಯದಲ್ಲಿ ಉತ್ಪತ್ತಿಯಾಗಬೇಕು. ಅಹಂಕಾರ ಇದ್ದರೆ ಯಾವುದೂ ದಕ್ಕಲಾರದು. ಎಲ್ಲಾ ವೃತ್ತಿಗಳಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸೈನಿಕರಿಗೆ, ಎಲ್ಲರಿಗೂ ಜೀವನವನ್ನು ಸುಂದರಗೊಳಿಸಲು ಸಮಸ್ಯೆಗಳಿಂದ ಹೊರಬರಲು ಭಗವದ್ಗೀತೆಯ ಅಧ್ಯಯನ ಅಗತ್ಯ ಎಂದು ಪ್ರಸಿದ್ಧ ವಾಗ್ಮಿ, ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯರು ನುಡಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆಯಲ್ಲಿ ಭಗವದ್ಗೀತೆಯ ಅಧ್ಯಯನದ ಮಹತ್ವದ ಬಗ್ಗೆ ಮಾತನಾಡುತ್ತ, ಸ್ಥಿತಪ್ರಜ್ಞತೆಯನ್ನು ಉಳಿಸಿಕೊಳ್ಳಲು ಗೀತೆ ಸಾಧನ; ಆದುದರಿಂದ ಎಲ್ಲರೂ ಓದಲೇಬೇಕಾದ ಪವಿತ್ರಗ್ರಂಥ ಭಗವದ್ಗೀತೆ ಎಂದು ತಿಳಿಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡುತ್ತಾ ಭಗವದ್ಗೀತೆ ಸರ್ವತ್ರ ಮೌಲ್ಯಯುತವಾದದ್ದು. ಉತ್ತಮ ನಾಗರಿಕರಾಗಲು ಭಗವದ್ಗೀತೆಯನ್ನು ಭಕ್ತಿಯಿಂದ ಓದಿ. ಈ ಕೈಂಕರ್ಯದಲ್ಲಿ ಸದಾ ನಾವು ನಿಮ್ಮ ಜತೆಗೆ ಇದ್ದೇವೆ ಶುಭವಾಗಲಿ ಎಂದು ವಿದ್ಯಾರ್ಥಿಗಳನ್ನು ಹರಸಿದರು.
ಉಪನ್ಯಾಸಕಿಯರಾದ ಶೈನಿ, ಪುಷ್ಪಲತಾ, ಜಯಂತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರು ಸ್ವಾಗತಿಸಿ, ಉಪನ್ಯಾಸಕಿ ಚೈತ್ರಾ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಮುರಳಿ ಮೋಹನ್, ಜಯಂತ್ ಸಹಕರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment