ಮಂಗಳೂರು: ಕಾಸರಗೋಡಿನ ಗಡಿನಾಡಿಗರಿಗೆ ಆರ್ಟಿಪಿಸಿಆರ್ ಟೆಸ್ಟಿನಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಕಾಸರಗೋಡು ಜಿಲ್ಲೆಯ ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ತಂಡವಾದ "ಸಹಯಾತ್ರಿ"ಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಇಂದು ಮನವಿ ಮಾಡಿತು.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಕಾಸರಗೋಡು ಜಿಲ್ಲೆಯ ಕೊರೋನ ಟೆಸ್ಟ್ ಪಾಸಿಟಿವಿಟಿ ರೇಟಿನ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾಸರಗೋಡಿನ ಸಾವಿರಾರು ಮಂದಿ ಜನರು ಉದ್ಯೋಗ, ವಿದ್ಯಾಭ್ಯಾಸ, ವೈದ್ಯಕೀಯ ಹಾಗೂ ವ್ಯಾಪಾರ ವಹಿವಾಟುಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ್ದು. ಕರ್ನಾಟಕ ಸರಕಾರವು ಕಾಸರಗೋಡಿಗರಿಗೆ ದಕ್ಷಿಣ ಕನ್ನಡಕ್ಕೆ ಪ್ರವೇಶಿಸಲು ಆರ್ ಟಿ ಪಿ ಸಿ ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ನೆಗೆಟಿವ್ ರಿಪೋರ್ಟ್ ಅನ್ನು ಹಾಜರಿಪಡಿಸಿದವರಿಗೆ ಮಾತ್ರ ಕರ್ನಾಟಕಕ್ಕೆ ಪ್ರವೇಶವನ್ನು ನೀಡುತ್ತಿದೆ. ದ.ಕ ಜಿಲ್ಲೆಗೆ ಉದ್ಯೋಗ ನಿಮಿತ್ತ ನಿತ್ಯ ಬರಬೇಕಾದ ಕಾಸರಗೋಡಿಗರು ತಿಂಗಳಲ್ಲಿ ನಾಲ್ಕು ಬಾರಿ ಕರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತಿದೆ.
ಇದೀಗ ಶಾಲಾ ಕಾಲೇಜುಗಳು ಆರಂಭವಾಗಿದ್ದು ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕಾಸರಗೋಡಿನ ವಿದ್ಯಾರ್ಥಿಗಳು ಕೂಡಾ ಪ್ರತೀ ವಾರ ಕರೋನಾ ಟೆಸ್ಟ್ ಗೆ ಒಳಪಡಬೇಕಾಗುತ್ತಿದೆ. ಅರ್ ಟಿ ಪಿ ಸಿ ಆರ್ ಕಟ್ಟುಪಾಡುಗಳಿಂದ ಗಡಿನಾಡಿನ ಉದ್ಯೋಗ, ವಿದ್ಯಾರ್ಥಿ ಹಾಗೂ ವ್ಯಾಪಾರ ಮಾತ್ರವಲ್ಲದೆ ತುರ್ತು ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ ಗಡಿ ಸಂಚಾರ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಹಯಾತ್ರಿ ತಂಡ ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಸಹಯಾತ್ರಿ ತಂಡದ ಲೋಕೇಶ್ ಜೋಡುಕಲ್ಲು, ಕೃಷ್ಣ ಕಿಶೋರ್ ಏನಂಕೂಡ್ಲು, ಶಿವಕೃಷ್ಣ ನಿಡುವಜೆ ಹಾಗೂ ಗಣೇಶ್ ಭಟ್ ವಾರಣಾಸಿ ಸಹಯಾತ್ರಿಯ ಪರವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು.
ಬುಧವಾರ ಸಂಜೆಯ ಮಾಹಿತಿಯಂತೆ-
ಕಾಸರಗೋಡು ತಾಲೂಕಿನ 12 ಪಂಚಾಯತ್ ಗಳು ಹಾಗೂ ಒಂದು ಮುನಿಸಿಪಾಲಿಟಿಯ (ಕಾಸರಗೋಡು ಮುನಿಸಿಪಾಲಿಟಿ) ಸರಾಸರಿ ಟೆಸ್ಟ್ ಪಾಸಿಟಿವ್ ರೇಟ್ (TPR) 2.09% ಹಾಗೂ ಕಾಸರಗೋಡು ತಾಲೂಕಿನ ಒಟ್ಟು ಆಕ್ಟಿವ್ ಕರೋನಾ ಕೇಸ್ ಗಳ ಸಂಖ್ಯೆ 390.
ಮಂಜೇಶ್ವರ ತಾಲೂಕಿನ ಒಟ್ಟು 8 ಪಂಚಾಯತ್ ಗಳ ಟೋಟಲ್ ಪಾಸಿಟಿವಿಟಿ ರೇಟ್ (TPR) 0.45% ಹಾಗೂ ಮಂಜೇಶ್ವರ ತಾಲೂಕಿನಲ್ಲಿರುವ ಒಟ್ಟು ಆಕ್ಟಿವ್ ಕರೋನಾ ಕೇಸ್ ಗಳ ಸಂಖ್ಯೆ 94.
ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವುದು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನವರು ಮಾತ್ರ. ಈ ಎರಡೂ ತಾಲೂಕುಗಳ TPR ಬಹಳ ಕಡಿಮೆ ಇದೆ ಹಾಗೂ ಆಕ್ಟಿವ್ ಕರೋನಾ ಕೇಸ್ ಗಳ ಸಂಖ್ಯೆಯೂ ಕಡಿಮೆ ಇದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ

Post a Comment