ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳ ಮಾಹಿತಿ ಕಾರ್ಯಾಗಾರ
ಪುತ್ತೂರು: ಸಿಎಯಂತಹ ಔದ್ಯೋಗಿಕ ಸಾಧ್ಯತೆಗಳು ವಿದ್ಯಾರ್ಥಿಗಳನ್ನು ಸ್ವಾವಲಂಬಿ ಜೀವನದೆಡೆಗೆ ಕರೆದೊಯ್ಯುತ್ತವೆ. ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ವಾಣಿಜ್ಯ ವಿಭಾಗಕ್ಕೆ ವಿಪುಲ ಅವಕಾಶ ಇದ್ದು, ವಾಣಿಜ್ಯ ವಿದ್ಯಾರ್ಥಿಗಳು ಅದನ್ನು ಉಪಯೋಗಿಸಬೇಕು ಎಂದು ಪುತ್ತೂರಿನ ವೃತ್ತಿಪರ ಕೋರ್ಸ್ ತರಬೇತುದಾರ ರಾಜ್ಗಣೇಶ್ ಕಾಮತ್ ಹೇಳಿದರು.
ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಸಿಎ ತರಬೇತಿ ಸಂಸ್ಥೆ ವಿಕಾಸ್ ಇದರ ಸಹಯೋಗದೊಂದಿಗೆ ಉಪನ್ಯಾಸಕರಿಗೆ ಮತ್ತು ಆಸಕ್ತರಿಗೆ ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯಾವುದೇ ದೇಶ ಅಭಿವೃದ್ಧಿ ಸಾಧಿಸಲು ಆರ್ಥಿಕತೆ ಅನ್ನುವುದು ಬಹಳ ಮುಖ್ಯ. 2008 ರ ಬಳಿಕ ವಾಣಿಜ್ಯ ಕೋರ್ಸ್ ಗಳು ಜನಪ್ರಿಯತೆ ಪಡೆದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ವಾಣಿಜ್ಯ ಪದವಿ ಶಿಕ್ಷಣದಲ್ಲಿ ಅನೇಕ ವಿಭಾಗಗಳು ಬಂದಿವೆ. ಅನೇಕ ಹೊಸ ವಿಷಯಗಳು ಬರುತ್ತಿವೆ. ಆಯ್ಕೆ ಮಾಡಿಕೊಳ್ಳುವಾಗ ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು. ಇತರರ ಅನುಕರಣೆ ಬದಲು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಯಶಸ್ವಿಯಾಗಬಹುದು. ಸಿಎಯಂತಹ ವಿಷಯಗಳು ಸುಲಭಕ್ಕೆ ಒಲಿಯುವಂತಹವುಗಳಲ್ಲ. ಅಪಾರ ಪರಿಶ್ರಮ ಇದ್ದರೆ ಮಾತ್ರ ಕನಸು ನನಸಾಗಬಹುದು. ಈಗೀಗ ಅನೇಕ ಹೊಸಹೊಸ ಶಿಕ್ಷಣ ಸಾಧ್ಯತೆಗಳು ಕಣ್ಣಮುಂದೆ ಕಾಣಿಸಿಕೊಳ್ಳುತ್ತಿವೆ. ಅಂತಹ ವಿಷಯಗಳ ಬಗೆಗೆ ದೊರಕುವಂತಹ ಮಾಹಿತಿಯನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಿ ಸಿದ್ಧತೆ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಜಿಎಸ್ಟಿಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್ ಆಕೌಂಟೆಂಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎ ಶಿಕ್ಷಣಕ್ಕೂ ಆದ್ಯತೆ ಹೆಚ್ಚಾಗತೊಡಗಿದೆ. ಸಿಎ ಶಿಕ್ಷಣ ಪಡೆದವರಿಗೆ ವಿದೇಶದಲ್ಲೂ ಹೆಚ್ಚಿನ ಅವಕಾಶಗಳಿವೆ ಎಂದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಯಶವಂತಿ ನಿರೂಪಿಸಿದರು. ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಸ್ವಾಗತಿಸಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق