ರಕ್ಷಾ ಬಂಧನ ದಿನದಂದು ಶೇ 90ಕ್ಕೂ ಹೆಚ್ಚು ಜನರು ಪ್ಲಾಸ್ಟಿಕ್ನಿಂದ ಮಾಡಿರುವ ರಾಖಿಗಳನ್ನು ಬಳಸುತ್ತಾರೆ. ರಕ್ಷಾ ಬಂಧನ ಮುಗಿದ ಮರುದಿನ ಅದನ್ನು ತಿಪ್ಪೆಗೆ ಎಸೆಯಲಾಗುತ್ತದೆ. ಆಹಾರವನ್ನು ಹುಡುಕುತ್ತ ಬರುವ ಪ್ರಾಣಿ ಪಕ್ಷಿಗಳು ಆಹಾರದ ಜೊತೆಗೆ ಪ್ಲಾಸ್ಟಿಕ್ ಕೂಡ ತಿಂದುಬಿಡುತ್ತವೆ. ಅದು ಹೊಟ್ಟೆಯಲ್ಲಿ ಕರಗದೆ ಬಹಳಷ್ಟು ಪ್ರಾಣಿ ಪಕ್ಷಿಗಳು ಜೀವ ಕಳೆದು ಕೊಳ್ಳುತ್ತಿವೆ. ಅದನ್ನು ಪರಿಗಣಿಸಿ ಕಲಬುರಗಿ ಜಿಲ್ಲೆ ಹಾಗೂ ಕಲಬುರಗಿ ತಾಲ್ಲೂಕಿನ ಗರೂರ (ಬಿ) ಗ್ರಾಮದ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ(ರಿ) ಮತ್ತು ಸ್ಪೂರ್ತಿ ಕ್ರಿಯೇಟಿವ್ ಮೈಂಡ್ಸ್ ವತಿಯಿಂದ ಗರೂರು (ಬಿ) ಗ್ರಾಮದಲ್ಲಿ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸುತ್ತಿದ್ದಾರೆ.
ಈ ಪರಿಸರ ಸ್ನೇಹಿ ರಾಖಿಯು ಗೋಮಯದಿಂದ ಮಾಡಿದ್ದು ಮತ್ತು ರಾಖಿಯ ಮೇಲ್ಭಾಗದಲ್ಲಿ ತುಳಸಿ ಬೀಜಗಳನ್ನು ಹಚ್ಚಲಾಗಿದೆ. ರಕ್ಷಾ ಬಂಧನ ಮುಗಿದ ಮರುದಿನ ರಾಖಿಯು ಹೂವಿನ ಕುಂಡದಲ್ಲಿ ಇಟ್ಟು ಮಣ್ಣಿನಿಂದ ಮುಚ್ಚಿದರೆ ಗೋಮಯ ರಾಖಿಯು ಕ್ರಮೇಣವಾಗಿ ಕರಗಿ ಗೊಬ್ಬರವಾಗಿ ತುಳಸಿ ಬೀಜ ಬೆಳೆಯುವಲ್ಲಿ ಅನುಕುಲವಾಗುತ್ತದೆ. ಇದು ಹೊರಗೆ ಬಿಸಾಡಿದರೂ ಯಾವುದೇ ರೀತಿ ಪರಿಸರಕ್ಕೆ ಹಾನಿಯಾಗುವುದಿಲ್ಲ.
ಪರಿಸರ ಸ್ನೇಹಿ ಗೋಮಯ ರಾಖಿ ಮಾಡುವ ವಿಧಾನ:
ಮೊದಲು ಆಕಳ ಸೆಗಣಿಯನ್ನು ತೆಗೆದುಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ನಂತರ ಅದರ ಜೊತೆಗೆ ಗವರ್ ಗಮ್ ಮಿಶ್ರಣ ಮಾಡಿ ಚೆನ್ನಾಗಿ ಹದಗೊಳಿಸಿ ಇಟ್ಟುಕೊಳ್ಳಬೇಕು. ನಂತರ ಬೇಕಾದ ಆಚ್ಚು ತೆಗೆದುಕೊಂಡು ಅಚ್ಚು ಹಾಕಿ ಎರಡು ದಿನಗಳ ಕಾಲ ಚೆನ್ನಾಗಿ ನೆರಳಿನಲ್ಲಿ ಒಣಗಿಸಬೇಕು. ನಂತರ ಇಷ್ಟವಾದ ಬಣ್ಣವನ್ನು ಬಳಿದು ರಾಖಿಯ ಮೇಲೆ ಗಮ್ ನಿಂದ ತುಳಸಿ ಬೀಜಗಳನ್ನು ಹಚ್ಚಿ ರಿಬ್ಬನ್ ಅಂಟಿಸಬಹುದು ಅಥವಾ ನೂಲುದಾರವನ್ನು ಕಟ್ಟಿದರೆ ಸಾಕು ಪರಿಸರ ಸ್ನೇಹಿ ರಾಖಿ ಸಿದ್ದವಾಗುತ್ತದೆ.
-ಶಿವರಾಜಕುಮಾರ ಎನ್.ಹಳ್ಳಿ
ಅಧ್ಯಕ್ಷರು
(ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ)
ಕಲಬುರಗಿ ಜಿಲ್ಲೆ ಮತ್ತು ತಾಲೂಕು
ಮೊ: 8095007278, 7259128278
إرسال تعليق