ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಮೂಹಿಕ ಕಲ್ಲಿನ ಹೊಡೆತ ನರಳಿ ಕಂಗಾಲಾದ ಸಪ್ತವರ್ಣಿ

ಸಾಮೂಹಿಕ ಕಲ್ಲಿನ ಹೊಡೆತ ನರಳಿ ಕಂಗಾಲಾದ ಸಪ್ತವರ್ಣಿ



ಏನಿರ ಬಹುದು ಎಂಬ ಕುತೂಹಲವಿರಬಹುದು ನಿಮಗೆ... ಇದು ಆಷಾಡ ಮಾಸದ ಆಟಿ ಅಮವಾಸ್ಯೆಯ ದಿನದಂದು ಹಾಲೆ ಮರಗಳ ಅಳಲು. ಒಂದು ರೀತಿಯ ನಡುಕ. ಇತ್ತೀಚೆಗೆ ಈ ಹಾಲೆ ಮರ ಅಥವಾ ಸಪ್ತವರ್ಣಿ ಬಹಳ ಅಪರೂಪ- ಅಲ್ಲೊಂದು ಇಲ್ಲೊಂದು ಕಾಣ ಸಿಗುತ್ತದೆ. ಈ ದಿನ ಹಾಲೆ ಮರ ಇಂತಹ ಸ್ಥಳದಲ್ಲಿದೆ ಎಂದು ಕಂಡು ಬಂದರೆ ರಾತ್ರಿ ಹಗಲಾಗುವುದರೊಳಗೆ ಮನುಷ್ಯ ಜಂತುಗಳಿಂದ ಪಾಪ ಅದರ ಮೈ ಪೂರ ಗಾಯ.

ನಮ್ಮ ಮನೆಯ ಹತ್ತಿರದ ಎಳೆಯ ಮರಕ್ಕೆ ಮೊದಲಿನ ದಿನವೇ ಈ ಆಘಾತ. ಯಾರೋ ವ್ಯಾಪಾರಿಗಳಾಗಿರಬೇಕು. ಹರಿತವಾದ ಆಯುಧದಿಂದಲೇ ಒಂದು ಬದಿಯ ಸಂಪೂರ್ಣ ತೊಗಟೆಯನ್ನು ಬರ್ಬರವಾಗಿ ಕೆತ್ತಿ ಬಿಟ್ಟಿದ್ದಾರೆ. ಇನ್ನು ಆಟಿ ದಿನದ ಮುಂಜಾನೆ ನಾನು ಮೊದಲು ನಾನು ಮೊದಲು ಎ೦ದು ದಾಳಿ ನಡೆಸುವವರು ಬಹಳಷ್ಟು ಜನ.


ತುಳುನಾಡಿನ ತುಳುವರ ಸಂಪ್ರದಾಯದಲ್ಲಿ ಆಷಾಢ ಮಾಸದ ಆಟಿ ಅಮವಾಸ್ಯೆಯಂದು ಈ ಮರದ ತೊಗಟೆಯನ್ನು ಯಾರ ಗಮನಕ್ಕೂ ಬರದ ಹಾಗೆ ಬ್ರಾಹ್ಮೀ ಮುಹೂರ್ತದಲ್ಲಿ (ಮುಂಚಿನ ಕಾಲದಲ್ಲಿ ನಗ್ನರಾಗಿ ಎಂಬ ಕಟ್ಟಳೆ ಇತ್ತಂತೆ) ಕಬ್ಬಿಣ ಅಥವಾ ಇನ್ನಾವುದೇ ಲೋಹಗಳನ್ನು ಬಳಸದೆ ಚೂಪುಗಲ್ಲಿನಿಂದಲೇ ಅದರ ತೊಗಟೆಯನ್ನು ತೆಗೆದು ಅರೆಯುವ ಕಲ್ಲಿನಲ್ಲಿ ಓಮ ಮತ್ತು ಒಳ್ಳೆ ಮೆಣಸು ಇನ್ನು ಕೆಲವರು ಬೆಳ್ಳುಳ್ಳಿ ಹೀಗೆ ಚೆನ್ನಾಗಿ ಗುದ್ದಿ ರಸ ಹಿಂಡಿ ಬೊರ್ ಕಲ್ಲೊಂದನ್ನು (ಬಿಳಿಕಲ್ಲು) ಬೆಂಕಿಯಲ್ಲಿ ಸುಟ್ಟು ಆ ರಸಕ್ಕೆ ಹಾಕಿದಾಗ ಆ ಕಹಿ ಕಷಾಯ ಪರಿಪೂರ್ಣತೆಯನ್ನು ಪಡೆಯುತ್ತದೆ.


ಮನೆಯ ಗೃಹಿಣಿ ಅಥವಾ ತಾಯಿ ಅದನ್ನು ದೇವರಿಗೆ ಸಮರ್ಪಿಸಿ ಮನೆಯವರೆಲ್ಲರನ್ನು ಅನಿಷ್ಟ ರೋಗಗಳಿಂದ ರಕ್ಷಿಸು ಎಂದು ಮನೆ ಮಂದಿಗೆಲ್ಲ ಕೊಟ್ಟು ಕುಡಿದಾಗ ಅದು ದೇಹಕ್ಕೆ ಅಮೃತವಾಗಿ ಪರಿಣಮಿಸುತ್ತದೆ. ಇದರಿಂದ ತ್ರಾಣ ಕಳೆದು ಕೊಳ್ಳುವ ಕರಗುವ ಮೂಳೆಗಳು ಬಲಿಷ್ಟಗೊಳ್ಳುತ್ತವೆ ಎನ್ನುವುದು ಮನೆಯ ಹಿರಿಯರ ಅಭಿಪ್ರಾಯ.


ಇನ್ನು ಕಷಾಯ ಕುಡಿಯುವ ಮೊದಲು ಒಂದು ತುಂಡು ಬೆಲ್ಲ ಅಥವಾ ಗೇರು ಬೀಜ ಬಾಯಿಗೆ ಹಾಕಿ ತಿನ್ನುವುದರಿಂದ ಹೊಟ್ಟೆಯ ಹುಳುಗಳು ಚುರುಕುಗೊಂಡು ಸ್ವಾಹಾ ಮಾಡಲು ಆತುರದಿಂದ ಒಟ್ಟು ಸೇರುತ್ತವೆ. ಅದೇ ಸಮಯದಲ್ಲಿ ಸೇವಿಸುವ ಕಹಿ ಕಷಾಯ ಜೊತೆಗೆ ಬೆರೆಯವುದರಿಂದ ಅದನ್ನು ಸೇವಿಸುವುದರಿಂದ ಅಂತ್ಯ ಕಂಡುಕೊಳ್ಳುತ್ತವೆ ಎನ್ನುವುದು ಕುಡಿಯಲು ಹಠ ಮಾಡುವ ಎಳೆಯ ಮಕ್ಕಳಿಗೆ ದೊಡ್ಡವರ ಬುದ್ದಿವಾದ.


ಈ ಕೊರೊನಾ ದಂತಹ ಮಹಾಮಾರಿ ಲಾಸ್ಯ ವಾಡುತ್ತಿರುವ ಈ ಸಂದರ್ಭದಲ್ಲಿ ಸರ್ವ ರೋಗಗಳನ್ನು ಗುಣಪಡಿಸುವ ಶಕ್ತಿ ಇರುವ ಈ ದಿನದ ಮುಂಜಾನೆಯ ಕಹಿ ಕಷಾಯ ಸೇವನೆಯಂತಹ ಸಾಂಪ್ರದಾಯಿಕ ಆಚರಣೆಗಳು ನಿಜವಾಗಿಯೂ ಅತ್ಯವಶ್ಯಕ.


-ರಾಜೇಶ್ ಭಟ್ ಪಣಿಯಾಡಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post