ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಗಾನ ಅರ್ಥಧಾರಿ- ಶಿಕ್ಷಕ ಮಂಚಿ ದೂಮಣ್ಣ ರೈ ನಿಧನ

ಯಕ್ಷಗಾನ ಅರ್ಥಧಾರಿ- ಶಿಕ್ಷಕ ಮಂಚಿ ದೂಮಣ್ಣ ರೈ ನಿಧನ




ಮಂಗಳೂರು: ಯಕ್ಷಗಾನದ ಹಿರಿಯ ಅರ್ಥಧಾರಿ, ನಿವೃತ್ತ ಮುಖ್ಯೋಪಾಧ್ಯಾಯ ಮಂಚಿ ದೂಮಣ್ಣ ರೈ (84) ಇಂದು (ಆಗಸ್ಟ್ 24) ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ನಿಧನ ಹೊಂದಿದರು. ಇರಾ ಗ್ರಾಮದ ಕುಕ್ಕಾಜೆಬೈಲು ನಿವಾಸಿಯಾದ ಅವರು ಪತ್ನಿ ದೇವಕಿ ರೈ ಮತ್ತು ಮೈಸೂರಿನ ಹಿರಿಯ ಪೋಲಿಸ್ ಅಧಿಕಾರಿ, ಸಾಹಿತಿ ಧರಣೀದೇವಿ ಮಾಲಗತ್ತಿ ಸಹಿತ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗಡಿನಾಡ ಕವಿ ಕಯ್ಯಾರ ಕಿಂಞಣ್ಣ ರೈಯವರ ಶಿಷ್ಯರಾಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.


ಮಂಚಿ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಕಾಲ ಸೇವೆ ಸಲ್ಲಿದ್ದ ದೂಮಣ್ಣ ರೈ ಬಂಟ್ವಾಳ ಪರಿಸರದಲ್ಲಿ ನಡೆಯುತ್ತಿದ್ದ ಹತ್ತಾರು ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ಪ್ರಸಿದ್ಧರಾಗಿದ್ದರು.  ವಿವಿಧ ಸಂಘ ಸಂಸ್ಥೆಗಳ ಬೆಳವಣಿಗೆಗೂ ಕಾರಣಕರ್ತರಾಗಿದ್ದ ಅವರು ಹವ್ಯಾಸಿ ವೇಷಧಾರಿಗಳಾಗಿಯೂ ಗಮನ ಸೆಳೆದಿದ್ದರು.


ಇತ್ತೀಚೆಗೆ ನಿಧನರಾಗಿದ್ದ ಕುಕ್ಕಾಜೆ ಚಂದ್ರಶೇಖರ ರಾವ್, ಮೇರಾವು ಮಹಾಬಲ ರೈ ಮತ್ತು ದೂಮಣ್ಣ ರೈ ಯಕ್ಷಗಾನದ ತ್ರಿಮೂರ್ತಿಗಳಂತೆ ಜತೆಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದು ವಿಶೇಷವಾಗಿತ್ತು. ಪ್ರಗತಿಪರ ಕೃಷಿಕರಾಗಿ, ದೈವಾರಾಧನೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೂ ಮನೆತನದ ಯಜಮಾನರಾಗಿ ಅವರು ಖ್ಯಾತರು.  


ದೂಮಣ್ಣ ರೈ ಅವರ ನಿಧನಕ್ಕೆ ಇರಾ ಗ್ರಾಮ ಪಂಚಾಯತಿ, ಯಕ್ಷಾಂಗಣ ಮಂಗಳೂರು ಸೇರಿದಂತೆ ವಿವಿಧ ಯಕ್ಷಗಾನ ಸಂಘಗಳು ಮತ್ತು ಯಕ್ಷರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post