ಆಧುನಿಕ ಜಗತ್ತಿನ ಬಗ್ಗೆ ಓದುಗರಿಗೆ ವಿಶೇಷ ವ್ಯಾಖ್ಯಾನದ ಅಗತ್ಯವಿಲ್ಲವೆನಿಸುತ್ತದೆ. ಏಕೆಂದರೆ ಪ್ರತಿಯೊಬ್ಬರು ವಾಸ್ತವ ಬದುಕನ್ನು ಅನುಭವಿಸುತ್ತಲೇ ಇರುವವರಲ್ಲವೇ? ಒಂದು ಮಗು ತನ್ನ ಹೆತ್ತವರನ್ನು ನೋಡಲೂ ಅವಕಾಶವಿರದಷ್ಟು ಹೆತ್ತವರು ಬ್ಯುಸಿ., ನೆರೆಮನೆಯವ ವಿಷಯ ಬಿಡಿ ಹೆಸರೇ ಗೊತ್ತಿರಲಾರದಷ್ಟು ಬ್ಯುಸಿ, ಒಮ್ಮೆ ಊಟ ಮಾಡಿದ್ದೇನೆಯೋ ಇಲ್ಲವೋ ಎಂದು ನಮಗೇ ತಿಳಿಯದಷ್ಟು ಮರೆವು. ಯಾಕಾಗಿ ಹೇಳಿ...?
ಒತ್ತಡದ ಬದುಕಿನ ಕಥೆಯೊಳಡಗಿದ ವಾಸ್ತವಿಕತೆ ಇದು. ಪಿಯುಸಿಯಲ್ಲಿ " ಮುಂಬೈ ಜಾತಕ" ಎಂಬ ಕವನದ ಸಾಲು ಮನುಷ್ಯನ ಅವಸರದ ಜೀವನವನ್ನು ಬಿಚ್ಚಿಟ್ಟ ನೆನಪಿದೆ.
ಮಾತನಾಡಲು ಬಿಡಿ, ನಗಲೂ ಸಮಯವಿಲ್ಲದ ಜನ ಅದಕ್ಕಾಗಿಯೇ ನಗುವ ತರಗತಿಗೆ ಹೋಗುವ ಈ ಜಂಜಾಟದ ಬದುಕಲ್ಲಿ ಯೋಗದ ಪ್ರಾಮುಖ್ಯತೆ ಎಷ್ಟಿದೆ ಅಲ್ಲವೇ...?
ಮನುಷ್ಯನ ದೇಹವನ್ನು ಮಾತ್ರವಲ್ಲದೆ ಮಾನಸಿಕ ಒತ್ತಡವನ್ನು ಹತೋಟಿಯಲ್ಲಿ ಇಡಲು ಸಹಕರಿಸುವ ಏಕೈಕ ಮಂತ್ರ ಎಂದರೆ ಅದೇ ಯೋಗ. ಇಂದು ಯೋಗ ದಿನಾಚರಣೆ ಸಲುವಾಗಿ ಈ ಸಾಲು ಬರೆಯಬೇಕೆನಿಸಿತು. ದಿನವಿಡೀ ಒತ್ತಡದಲ್ಲೇ ಕಳೆಯುವ ವ್ಯಕ್ತಿಗೆ ಈ ಯೋಗ, ಧ್ಯಾನ ಅತ್ಯಂತ ಪರಿಣಾಮಕಾರಿಯಾಗಿ ಸಹಕರಿಸುತ್ತದೆ. ಮನಸ್ಸನ್ನು ನಿರಾಳವಾಗಿಸುವ ಶಕ್ತಿ ಈ ಯೋಗಕ್ಕಿದೆ. ಅದಕ್ಕಾಗಿಯೇ ಇಂದು ವಿದೇಶಿಗರು ಕೂಡ ಯೋಗದ ಮೊರೆ ಹೋಗುತ್ತಿದ್ದಾರೆ. ಇಂದ್ರಿಯಗಳ ಕೇಂದ್ರೀಕರಣ ಇದರಿಂದ ಸಾಧ್ಯ. ಪ್ರತೀ ದಿನವು ಯೋಗ ಮಾಡುವ ವ್ಯಕ್ತಿಯಲ್ಲಿ ಅನುಭವವನ್ನೊಮ್ಮೆ ಕೇಳಿ ನೋಡಿ. ಪ್ರಾಯೋಗಿಕ ಉತ್ತರ ಲಭಿಸುತ್ತೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ಮುಕ್ತ ಮನಸ್ಸೆಂಬ ಮಾಯಾದಂಡ ಇದ್ದರೆ ಸಾಕು.
ಈ ಯೋಗದಿನಾಚರಣೆಯ ಪರಿಕಲ್ಪನೆ , ಯೋಚನೆ ಯೋಜನಾತ್ಮಕವಾಗಿ ಜಾರಿಯಾದಾಗಲೇ ಯೋಗ ದಿನಕ್ಕೆ ಮಹತ್ವ ಸಿಕ್ಕಂತಾಗುವುದು ಅಲ್ಲವೇ? ಭಾರತ ಯೋಗಗುರುವಾಗಲಿ ಎಂಬ ಶುಭದೊಸಗೆಯೊಂದಿಗೆ...
-ಅರ್ಪಿತಾ ಕುಂದರ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment