ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದೆಲ್ಲೆಡೆ ಕೊರೋನಾ ತಾಂಡವವಾಡಿತ್ತು, ನಾವೂ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸಿದ್ದೆವು ಕೂಡ. ವಾಹನಗಳ ಸಂಚಾರವಿಲ್ಲದೆ, ಜನರ ತಿರುಗಾಟವಿಲ್ಲದೆ ಊರಿಗೆ ಊರೇ ಸ್ಥಬ್ಧವಾಗಿ ಉಳಿಯಬೇಕಾದ ಪಾಡು ಮತ್ತೊಮ್ಮೆ ಬರದಿದ್ದರಷ್ಟೇ ಸಾಕು ಎಂದು ಪ್ರಾರ್ಥಿಸಿಕೊಂಡವರೆಷ್ಟು ಜನವೋ?
ಮತ್ತೆ ಏನಾಯಿತು ನೋಡಿ. ಗಡಿರಾಜ್ಯ ಪ್ರವೇಶ ಇನ್ನು ಮುಂದೆ ನಿರ್ಬಂಧವಂತೆ, ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗೂ ಅವಕಾಶ ಇಲ್ಲವಂತೆ, ಆಫ್ರಿಕಾದಲ್ಲಿ ಹುಟ್ಟಿಕೊಂಡಿತಂತೆ, ನಮ್ಮ ಅವಸ್ಥೆ ಏನಂತೆ ಎಂಬ ಅಂತೆ ಕಂತೆಗಳ ಸುಳಿಯಲ್ಲಿ ಇಂದು ನಾವು ಮಾತ್ರ ಒದ್ದಾಡುತ್ತಿಲ್ಲ, ಜೊತೆಗೆ ಕೊರೋನಾವು ಕೂಡ ಬಂಧಿಯಾಗಿ ಕೂತಿದೆ.
ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರಲು, ಇನ್ನೊಂದು ಕಡೆ ಇಂತಹ ಅನೇಕ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರಲು ಎಲ್ಲರಿಗೂ ವ್ಯಥೆ ಆರಂಭವಾಗಿದೆ. ಮನಸ್ಸು ಬಿಕೋ ಎನ್ನುತ್ತಿದೆ. ಶಿಕ್ಷಣ ಮುಗಿದು ಇನ್ನಷ್ಟೇ ಉದ್ಯೋಗಕ್ಕೆ ಕಾಲಿಡಬೇಕಾದ ಯುವಜನತೆಯ ಪಾಡು ಹೇಳಿ ಪ್ರಯೋಜನವಿಲ್ಲ ಬಿಡಿ.
ಸಕಾರಾತ್ಮಕ ಚಿಂತನೆ ಅಭ್ಯುದಯದ ಮುನ್ನುಡಿ ಎಂಬ ಮಾತು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ದೇಶಕ್ಕೆ ಕೊರೋನಾ ಕಂಟಕ ಮತ್ತೊಮ್ಮೆ ಭಾಧಿಸದಿರಲಿ. ಬೆಳಕ ಬಯಸೋ ಜೀವಿಗಳ ಬದುಕು ಕೊರೋನಾ ಕರಾಳ ಛಾಯೆಯ ಹಿಂದೆ ಮರೆಯಾಗದಿರಲಿ ಅಲ್ಲವೇ.....?
-ಅರ್ಪಿತಾ ಕುಂದರ್
Post a Comment